ಡಿವಿಜಿಸುದ್ದಿ.ಕಾಂ, ದಾವಣಗೆರೆ: ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆಯಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಹೀಗಾಗಿ ಅಸ್ಪೃಷ್ಯತೆ ನಿವಾರಣೆಗಾಗಿ ಶಾಲೆ, ಹಾಸ್ಟೆಲ್ ತೆರೆಯಬೇಕೆಂದು ಜಯದೇವ ಶ್ರೀಗಳು ನೀಡಿದ ಸಲಹೆ ಮೇರೆಗೆ ಮಹಾತ್ಮ ಗಾಂಧಿಜಿ ಅವರು ದಾವಣಗೆರೆಯಲ್ಲಿ 1934 ರಲ್ಲಿ ಆದಿ ಕರ್ನಾಟಕ ವಿದ್ಯಾರ್ಥಿ ನಿಲಯ ಸ್ಥಾಪಿಸಿದರು ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದರು.

ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘ, ಡಾ. ಬಿ. ಎಂ ತಿಪ್ಪೇಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಹಾಗೂ ಪ್ರೌಢಶಾಲೆ ಸಹಯೋಗದೊಂದಿಗೆ ಆಯೋಜಿಸಿದ್ದ ಮಹಾತ್ಮ ಗಾಂಧಿ ವಿದ್ಯಾರ್ಥಿ ನಿಲಯದ 75 ನೇ ವರ್ಷದ ವಜ್ರ ಮಹೋತ್ಸವ ಮತ್ತು ಗಾಂಧಿ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ದಿನಾಂಕ 1/3/1934 ರಲ್ಲಿ ಮಹಾತ್ಮ ಗಾಂಧಿಜಿ ಅವರು ಚಿತ್ರದುರ್ಗ ಮುರುಘಾಮಠದ ಶ್ರೀ ಜಯದೇವ ಜಗದ್ಗುರುಗಳನ್ನು ಹಾವೇರಿ ಹೊಂಡದ ಮಠದಲ್ಲಿ ಭೇಟಿಯಾಗಿದ್ದರು. ಹಾವೇರಿಯಿಂದ ದಾವಣಗೆರೆಗೆ ದಿನಾಂಕ 2/3/1934 ರಂದು ಗಾಂಧಿಜಿ ಆಗಮಿಸಿ ಈಗಿನ ಗಾಂಧಿನಗರದಲ್ಲಿ ಪಾದಯಾತ್ರೆ ನಡೆಸಿ ಮುರುಘಾ ಮಠಕ್ಕೆ ಆಗಮಿಸಿದರು. ಆಗ ಜಯದೇವ ಶ್ರೀಗಳು ನೀಡಿದ ಸಲಹೆ ಮೇರಿಗೆ ತಳ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ಆದಿ ಕರ್ನಾಟಕ ವಿದ್ಯಾರ್ಥಿ ನಿಲಯಕ್ಕೆ ಅಡಿಗಲ್ಲು ಹಾಕಿರುವುದು ಸ್ಮರಣೀಯ ಘಟನೆ ಎಂದರು.
ಗಾಂಧಿಜಿ ಅವರು ಜಯದೇವ ಶ್ರೀಗಳ ಭೇಟಿ ವೇಳೆ ಅಸ್ಪೃಶ್ಯತೆ ನಿವಾರಣೆಗೆ ಬಗ್ಗೆ ಚರ್ಚೆ ನಡೆಸಿದ್ದರು. ನೀವು ಅಸ್ಪೃಶ್ಯತೆ ನಿವಾರಣೆಗೆ ಕೇವಲ ಜಾಗೃತಿ ಮೂಡಿಸಿದರೆ ಸಾಲದು, ಅವರ ಭಿವೃದ್ಧಿಗಾಗಿ ಶೈಕ್ಷಣಿಕ ಸಂಸ್ಥೆಗಳನ್ನು ತೆರೆವಂತೆ ಮಾರ್ಗದರ್ಶನ ನೀಡಿದ್ದರು. ಹಾಗೆಯೇ ಬಸವಣ್ಣ ಅವರ ತತ್ವ ಆದರ್ಶಗಳನ್ನು ವಿವರಿಸಿದ್ದರು ಎಂದು ತಿಳಿಸಿದರು.
ಪ್ಯಾರಾಮೆಡಿಕಲ್ ಕಚೇರಿ, ಲ್ಯಾಬ್, ನೂತನ ಕೊಠಡಿ ಉದ್ಘಾಟಿಸಿದ ಶಾಸಕ ಶಾಮನೂರು ಶಿವಶಂಕರಪ್ಪ, ಮಹಾತ್ಮ ಗಾಂಧಿ ವಿದ್ಯಾಸಂಸ್ಥೆ 75 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವುದು ಸಂತೋಷದಾಯಕ ಸಂಗತಿ .1934 ರಲ್ಲೆ ಯಾವುದಾದ್ರು ಶಿಕ್ಷಣ ಸಂಸ್ಥಗೆ ಅಡಿಗಲ್ಲು ಹಾಕಿದ್ದರೆ ಅದು ಮಹಾತ್ಮಗಾಂಧಿ ಸಂಸ್ಥೆ. ಉತ್ತಮ ಆಡಳಿತ ಮಂಡಳಿ ಹೊಂದಿರುವ ಸಂಸ್ಥೆ ಪ್ರಗತಿಯತ್ತ ಕಾಲಿಟ್ಟಿದೆ. ಇದೇ ಹಾದಿಯಲ್ಲಿ ಸಾಗಲಿ ಎಂದರು.

ಇದೇ ಸಂದರ್ಭದಲ್ಲಿ ಮಹಾತ್ಮಗಾಂಧಿ ಆಡಳಿತ ಮಂಡಳಿ ನಿರ್ದೇಶಕರಾಗಿರುವ ಡಾ. ಸಿ. ವರದರಾಜ್ ಅವರಿಗೆ ಪಿಹೆಚ್ ಡಿ ದೊರೆತಿರುವುದಕ್ಕೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ , ಬಿಐಇಟಿ ಕಾಲೇಜು ನಿರ್ದೇಶಕ ಪ್ರೊ. ವೃಷಬೇಂದ್ರಪ್ಪ, ಸಂಘದ ಅಧ್ಯಕ್ಷ ಎಲ್.ಎಚ್. ಹನುಮಂತಪ್ಪ, ುಪಾಧ್ಯಕ್ಷ ಬಿ.ಎಂ ಈಶ್ವರಪ್ಪ, ಕಾರ್ಯದರ್ಶಿ ಬಿ.ಎಚ್. ವೀರಭದ್ರಪ್ಪ, ಜಿಂಟಿ ಕಾರ್ಯದರ್ಶಿ ಗಂಗಾಧರಪ್ಪ, ನಿರ್ದೇಶಕರಾದ ಎ.ಕೆ. ನಾಗಪ್ಪ, ಬಿ.ಎಸ್. ಪುರುಷೋತ್ತಮ, ಎಂ.ಜಿ. ರಂಗನಾಥ್, ಕೆ. ಚಂದ್ರಣ್ಣ, ಮಂಜಪ್ಪ ಹಲಗೇರಿ, ಶಿವರಾಜ್ ಆದಾಪುರ್, ಎನ್. ಮಲ್ಲೇಶಪ್ಪ, ಬಿ.ಕೆ. ಹುಚ್ಚೆಂಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



