ನವದೆಹಲಿ: ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ ಯು ) ಹಳೆ ವಿದ್ಯಾರ್ಥಿ ಉಮರ್ ಖಲೀದ್ನನ್ನು ಪೊಲೀಸರು ನಿನ್ನೆ ತಡ ರಾತ್ರಿ ಬಂಧಿಸಿದ್ದಾರೆ. ಇಂದು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ.
ದೆಹಲಿಯ ವಿಶೇಷ ಪೊಲೀಸ್ ವಿಭಾಗ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ) ಅಡಿ ಬಂಧಿಸಿದೆ. ಭಾನುವಾರ ತಡರಾತ್ರಿ ಬಂಧನದ ಬಳಿಕ ಸುಮಾರು 9 ಗಂಟೆಗಳ ಕಾಲ ಖಲೀದ್ನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಇಂದು ದೆಹಲಿ ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ.
ಫೆಬ್ರವರಿ 24ರಿಂದ 26ರ ವರೆಗೆ ಜಫರಾಬಾದ್ ಶಾಕುರ್ ಬಸ್ತಿ, ಶಿವ ವಿಹಾರ, ಸಲೀಮ್ಪುರ ಸೇರಿದಂತೆ ಈಶಾನ್ಯ ದೆಹಲಿಯ ವಿವಿಧ ಭಾಗಗಳಲ್ಲಿ ಭಾರೀ ಪ್ರಮಾಣ ಗಲಭೆ ನಡೆದಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಹೋರಾಟದಲ್ಲಿ ಅನೇಕ ಸಾವು ನೋವು, ಆಸ್ತಿ ಪಾಸ್ತಿ ಹಾನಿ ಸಂಭವಿಸಿತ್ತು.
ಗಲಭೆಯಲ್ಲಿ ಕನಿಷ್ಟ 53 ಜನ ಜೀವ ಕಳೆದುಕೊಂಡಿದ್ದರು. 581 ಜನರಿಗೆ ತೀವ್ರ ಗಾಯಗಳಾಗಿದ್ದವು. ಇದರಲ್ಲಿ 97ಜನ ಕೇವಲ ಗುಂಡಿನಿಂದ ಗಾಯಗೊಂಡಿದ್ದರು. ಇದೀಗ ಖಲೀದ್ನನ್ನು ಬಂಧಿಸಿರುವುದಾಗಿ ಅವರ ತಂದೆ ಖಚಿತಪಡಿಸಿದ್ದಾರೆ. ನನ್ನ ಮಗ ಖಲೀದ್ನನ್ನು ರಾತ್ರಿ 11ರ ಸುಮಾರಿಗೆ ವಿಶೇಷ ಪೊಲೀಸ್ ವಿಭಾಗದಿಂದ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ದೆಹಲಿ ಗಲಭೆಗೆ ಸಂಬಂಧಿಸಿದಂತೆ ಈ ವರೆಗೆ ದೆಹಲಿ ವಿಶೇಷ ವಿಭಾಗದ ಪೊಲೀಸರು 1,575 ಜನರನ್ನು ಬಂಧಿಸಿದ್ದು, ಒಟ್ಟು 751 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಲ್ಲದೆ 250 ಚಾರ್ಜ್ ಶೀಟ್ಗಳನ್ನು ಸಲ್ಲಿಸಿದ್ದಾರೆ. ಒಟ್ಟು 1,153 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.



