ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಜಿಲ್ಲಾಡಳಿತ, ತಾಲೂಕು ಮಟ್ಟದ ಅಧಿಕಾರಿಗಳು ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಿದ್ದವಿರಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಕರೆ ನೀಡಿದರು.
ಇಂದು ನಡೆದ ಗೂಗಲ್ ಮೀಟ್ನಲ್ಲಿ ಮಾತನಾಡಿದ ಅವರು, ಪ್ರವಾಹದಿಂದ ಬೆಳೆ, ಮನೆ ಹಾನಿಗೆ ತಕ್ಷಣ ಪರಿಹಾರ ಒದಗಿಸಿ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಅದರೊಂದಿಗೆ ಹೆಚ್ಚು ಮಳೆಯಾಗುತ್ತಿರುವುದರಿಂದ ಎರಡೂ ಪರಿಸ್ಥಿತಿಗಳನ್ನು ಒಟ್ಟಾಗಿ ನಿಭಾಯಿಸಬೇಕಾಗಿದೆ. ಈಗಾಗಲೇ ತುಂಗಾನದಿಗೆ ಸಾಕಷ್ಟು ನೀರು ಬಂದಿದ್ದು ಕೆಲವೇ ದಿನಗಳಲ್ಲಿ ಭದ್ರಾ ನೀರು ಸೇರಲಿದೆ. ಹಾಗಾಗಿ ನದಿದಂಡೆ ಮತ್ತು ನದಿಪಾತ್ರದಲ್ಲಿರುವ ಜನ- ಜಾನುವಾರುಗಳು ಪ್ರವಾಹಕ್ಕೆ ಒಳಗಾಗುವ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದರು.
ಪ್ರವಾಹಕ್ಕೆ ಸಿಲುಕುವ ಕುಟುಂಬಗಳನ್ನು ತಕ್ಷಣ ಸ್ಥಳಾಂತರಿಸಿ ಅವರನ್ನು ಕಾಳಜಿ ಕೇಂದ್ರಗಳಿಗೆ ಕಳುಹಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಮುಖ್ಯವಾಗಿರುವುದರಿಂದ ಸುಸಜ್ಜಿತ ಸ್ಥಳಗಳನ್ನು ಗುರುತಿಸಬೇಕು ಸಮುದಾಯಭವನ, ಹಜ್ಭವನ, ಗುರುಭವನಗಳನ್ನು ಗುರುತಿಸಿ ಒಂದೇ ಕಡೆ ಅಡುಗೆ ವ್ಯವಸ್ಥೆ ಮಾಡಿ ಅಲ್ಲಿಂದ ಚಿಕ್ಕ ಚಿಕ್ಕ ವಾಹನಗಳ ಮೂಲಕ ಆಹಾರ ಮತ್ತು ನೀರನ್ನು ಸರಬರಾಜು ಮಾಡಬೇಕು ಎಂದರು.
ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದು ಕೃಷಿ ಯೂರಿಯಾ ಅಭಾವದ ದೂರುಗಳಿವೆ. ಯೂರಿಯಾಗೆ ಯಾವದೇ ತೊಂದರೆ ಇಲ್ಲ. ಬೇಡಿಕೆ ಸಲ್ಲಿಸಿ ಪೂರೈಸಲು ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಎಂದು ಸೂಚಿಸಿದರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾಹಿತಿನೀಡಿ, ಜಿಲ್ಲೆಯಲ್ಲಿ ಜೂನ್, ಆಗಸ್ಟ್, ತಿಂಗಳಿನಲ್ಲಿ 273 ಮನೆಗಳು ಭಾಗಶಃ ಹಾನಿಯಾಗಿದೆ ಅವರಿಗೆ 11ಲಕ್ಷ ಪರಿಹಾರ ನೀಡಲಾಗಿದೆ ಹಾಗೂ 785 ಎಕರೆ ಬೆಳೆಹಾನಿ ಆಗಿದ್ದು 1681 ರೈತರಿಗೆ 1.14 ಕೋಟಿ ಪರಿಹಾರ ನೀಡಲಾಗಿದೆ. ಈ ವಾರದಲ್ಲಿ 2 ಮನೆಗಳಿಗೆ ಹಾನಿಯಾಗಿದ್ದು ಸೋಮವಾರ ಆ ಕುಟುಂಬಗಳಿಗೆ ತಲಾ ರೂ 25, ಸಾವಿರ ಪರಿಹಾರ ನೀಡಲಾಗುವುದು ಎಂದರು.
ಹೊನ್ನಾಳಿ ಕೃಷಿಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ ತಾಲೂಕಿನಲ್ಲಿ 500 ಎಕರೆ ಮಕ್ಕೆಜೋಳ ಬೆಳೆಹಾನಿ ಆಗಿದ್ದು ಹೊಲಗಳಲ್ಲಿ ಬಹಳಷ್ಟು ನೀರು ನಿಂತಿದ್ದು ಹಾನಿ ಪ್ರಮಾಣ ಅಂದಾಜಿಸಲು ಒಂದೆರಡು ದಿನ ಹಿಡಿಯುತ್ತದೆ ಎಂದರು.
ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ ಮಾತನಾಡಿ, ಅತಿಯಾದ ಮಳೆಯಿಂದ ಸಾರಥಿ- ಚಿಕ್ಕಬಿದರೆ , ಉಕ್ಕಡಗಾತ್ರಿ ಸಂಪರ್ಕ ಕಡಿತಗೊಂಡಿದ್ದು ಜನಸಂಚಾರ ಬಂದ್ ಮಾಡಲಾಗಿದೆ ಹಾಗೂ ಆ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು.
ದಾವಣಗೆರೆ ತಹಶೀಲ್ದಾರ್ ಗಿರೀಶ್ ಮಾಹಿತಿನೀಡಿ, ಆನಗೋಡು ಪ್ರದೇಶದಲ್ಲಿ 4.8.ಮಿ.ಮಿಟರ್ ಮಳೆಯಾಗಿದ್ದು ಈ ಹಿಂದೆ ಹಾನಿಗೊಳಗಾಗಿದ್ದ 42 ಮನೆಗಳಿಗೆ 1ಕೋಟಿ 32ಲಕ್ಷ ಪರಿಹಾರ ನೀಡಲಾಗಿದೆ ಎಂದರು. ಇತ್ತಿಚಿಗೆ 2 ಮನೆಗಳಿಗೆ ಹಾನಿಯಾಗಿದೆ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು ಎಂದರು.
ಕೃಷಿಇಲಾಖೆ ಅಧಿಕಾರಿ ಮಾಹಿತಿನೀಡಿ ಸ್ವಲ್ಪ ಮಟ್ಟಿಗಿನ ಯೂರಿಯಾ ಕೊರತೆ ಇದೆ ಆನಗೋಡು, ಅಣಜಿ, ಆಲೂರುಗಳ ಬೆಳೆಹಾನಿ ಪ್ರದೇಶಗಳ ಪಟ್ಟಿ ಮಾಡಲಾಗಿದೆ ಎಂದರು, ಜುಲೈ ತಿಂಗಳ ಕೋಟಾ ಯೂರಿಯಾ ಬಂದಿದ್ದು ಅಗಸ್ಟ್ ತಿಂಗಳ ಕೋಟಾ ಬರಬೇಕಿದೆ ಎಂದರು.
ರಾಜನಹಳ್ಳಿ ಸಮೀಪ ಹೊಳೆಯಲ್ಲಿ ಮರದ ಮೇಲೆ ಸಿಲುಕಿರುವ ಕೋತಿಗಳನ್ನು ಸುರಕ್ಷಿತವಾಗಿ ದಂಡೆಗೆ ತಲುಪಿಸಲು ಸಂಸದರು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ಶಿವಪ್ರಸಾದ ಈಗಾಗಲೇ ಬೊಟ್ ಮೂಲಕ ಹಗ್ಗದ ಸಹಾಯದಿಂದ ಕೋತಿಗಳನ್ನು ರಕ್ಷಿಸುವ ಕಾರ್ಯ ಆರಂಭವಾಗಿದೆ ಎಂದರು.
ಚನ್ನಗಿರಿ ತಹಶೀಲ್ದಾರ್ ಪುಟ್ಟರಾಜು ಮಾಹಿತಿನೀಡಿ, ಉತ್ತಮ ಮಳೆಯಾಗುತ್ತಿದ್ದು ಉಬ್ರಾಣಿ ಭಾಗದಲ್ಲಿ 13 ಮನೆಗಳಿಗೆ ಹಾನಿಆಗಿದೆ ಈ ಕುರಿತು ಪ್ರಸ್ತಾವನೆ ಸಿದ್ದಪಡಿಸಲಾಗಿದೆ 58 ಎಕರೆ ಮಕ್ಕೆಜೋಳ ಹಾನಿಗೀಡಾಗಿದ್ದು ಕಂದಾಯ ಮತ್ತು ಕೃಷಿ ಇಲಾಖೆಯಿಂದ ಅಂದಾಜು ನಷ್ಟ ಸಿದ್ದಪಡಿಸಲಾಗುತ್ತಿದೆ ಎಂದರು.
ಜಗಳೂರು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿ, ನಮ್ಮಲಿ ಯಾವುದೇ ಬೆಳೆಹಾನಿ ಆಗಿಲ್ಲ ಉತ್ತಮ ಮಳೆಯಾಗಿದೆ. ಉತ್ತಮ ಮಳೆಯಿಂದ ಕರೆಗಳಿಗೆ ನೀರು ಬಂದಿದೆ ಕೆಲ ಜಮೀನುಗಳು ಜಲಾವೃತವಾಗಿವೆ ಆ ಜಮೀನಿನ ರೈತರ ಪಟ್ಟಿಮಾಡಿ ಕೃಷಿ ಇಲಾಖೆಗೆ ಸಲ್ಲಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಎಂಥದ್ದೇ ಪರಿಸ್ಥಿತಿ ಬಂದರು ನಿಭಾಯಿಸಲು ನಮ್ಮ ತಂಡ ಸಿದ್ದವಿದೆ. ಪ್ರವಾಹ ಮತ್ತು ಕೋವಿಡ್ನಿಂದ ಜನರಿಗೆ ಯಾವುದೇ ತೊಂದರೆಯಾಗದಂತೆ ತಮ್ಮ ಮಾರ್ಗದರ್ಶನದಂತೆ ನಮ್ಮ ತಂಡ ಕಾರ್ಯ ನಿರ್ವಹಿಸಲಿದೆ ಎಂದರು.ಸಭೆಯಲ್ಲಿ ಸಂಸದರ ಆಪ್ತ ಕಾರ್ಯದರ್ಶಿ ದೇವರಾಜ್ ಉಪಸ್ಥಿತರಿದ್ದರು.