ಡಿವಿಜಿ ಸುದ್ದಿ, ಬೆಂಗಳೂರು: ಪೊಲೀಸ್ ಠಾಣೆಯಲ್ಲಿಯೂ 50 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಗೆ ಕೊರೊನಾ ಹಿನ್ನೆಲೆ ಅವಶ್ಯವಿರುವ ಸಿಬ್ಬಂದಿಯನ್ನು ಮಾತ್ರ ಠಾಣೆಗಳಲ್ಲಿ ನಿಯೋಜಿಸಬೇಕು. ಕಾನ್ಸ್ಟೆಬಲ್ಗಳಿಗೆ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ಆರೋಗ್ಯ ಭಾಗ್ಯ ಯೋಜನೆಯಡಿ ಎಲ್ಲ ಆಸ್ಪತ್ರೆಗಳಿಗೆ ತಕ್ಷಣ ಹಣ ಬಿಡುಗಡೆ ಮಾಡಿ. ಎಲ್ಲ ಪೊಲೀಸ್ ಸಿಬ್ಬಂದಿಗೆ ಪ್ರತ್ಯೇಕ ಚಿಕಿತ್ಸೆ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರ ದೂರುಗಳನ್ನು ಆನ್ಲೈನ್ ಮೂಲಕ ಸ್ವೀಕರಿಸಿ, ದಾಖಲಾದ ದೂರುಗಳನ್ನು ವಿಚಾರಣೆ ನಡೆಸಬೇಕು. 50 ವರ್ಷ ದಾಟಿದ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಬೇಕು.
ಕರ್ತವ್ಯ ಮುಗಿದ ಬಳಿಕ ಸಿಬ್ಬಂದಿ ಮತ್ತು ಠಾಣೆಯನ್ನು ಸ್ವಚ್ಛಗೊಳಿಸಲು ಅಗತ್ಯ ಹಣಕಾಸು ನೆರವು ನೀಡಬೇಕು. ಠಾಣೆಗಳಲ್ಲಿ ಸ್ವಾಗತಕಾರರ ಸ್ಥಳಗಳಲ್ಲಿ ಗಾಜಿನ ಕ್ಯಾಬಿನ್ ಅಳವಡಿಸಿ ದೂರು ಸ್ವೀಕರಿಸಲು ವ್ಯವಸ್ಥೆ ಮಾಡಬೇಕು ಎಂದರು.
ಕೋವಿಡ್ 19 ಆಸ್ಪತ್ರೆ ಮತ್ತು ಸ್ಮಶಾನಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಮಾಸ್ಕ್, ಹೆಡ್ಗ್ಲೆರ್, ಗ್ಲೌಸ್ ಮತ್ತು ಪಿಪಿಇ ಕಿಟ್ ನೀಡಬೇಕು. ಸಿಬ್ಬಂದಿಯ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್, ಆಯುರ್ವೇದಿಕ್ ಔಷಧ ನೀಡುವಂತೆಯೂ ಸೂಚನೆ ನೀಡಿದರು.



