ಡಿವಿಜಿ ಸುದ್ದಿ, ದಾವಣಗೆರೆ : ಆರೋಗ್ಯ ಇಲಾಖೆಯ ವೆಬ್ ಸೈಟ್ ಗೆ ಸೂಕ್ತ ಮಾಹಿತಿ ಅಪ್ಡೇಟ್ ಮಾಡದ 11 ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಂಗಳನ್ನು ಇಂದು ಸೀಜ್ ಮಾಡಲಾಯಿತು.
ಸರ್ಕಾರದ ಆದೇಶದಂತೆ ಆಸ್ಪತ್ರೆಗಳಿಗೆ ಬರುವವರಲ್ಲಿ ಶೀತ, ಜ್ವರದಂತಹ (ಐಎಲ್ಐ) ಮತ್ತು ತೀವ್ರ ಉಸಿರಾಟದ ತೊಂದರೆ(ಎಸ್ಎಆರ್ಐ) ಪ್ರಕರಣಗಳನ್ನು ಪ್ರತಿದಿನ ಆರೋಗ್ಯ ಇಲಾಖೆಯ ವೆಬ್ಪೋರ್ಟಲ್ಗೆ ಅಪ್ಡೇಟ್ ಮಾಡಬೇಕು. ಈ ಬಗ್ಗೆ ಮಾಹಿತಿ ಅಪ್ಡೇಟ್ ಮಾಡದ ನಗರದ ವಿವಿಧ ಖಾಸಗಿ ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಂಗಳಿಗೆ ಡಿಹೆಚ್ಓ ಡಾ.ರಾಘವೇಂದ್ರಸ್ವಾಮಿ ಮತ್ತು ತಂಡ ಭೇಟಿ ನೀಡಿ ಸೀಜ್ ಮಾಡಿದರು.
ಪಿಜೆ ಬಡಾವಣೆಯಿಂದ ಆರಂಭಿಸಿ ಕೆ.ಬಿ.ಬಡಾವಣೆ, ಬೇತೂರು ರಸ್ತೆ ಗಳಲ್ಲಿನ ಒಟ್ಟು 11 ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್ ಹೋಂಗಳನ್ನು ಸೀಜ್ ಮಾಡಲಾಯಿತು. ಈ ವೇಳೆ ಡಿಹೆಚ್ಓ ಡಾ.ರಾಘವೇಂದ್ರ ಸ್ವಾಮಿ ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿಂದ ಆರೋಗ್ಯ ನಿರ್ದೇಶನಾಲಯದ ಆಯುಕ್ತರು, ಕಾರ್ಯದರ್ಶಿಗಳು ಆದೇಶ ಹೊರಡಿಸಿ, ಕೆಪಿಎಂಇ ಕಾಯ್ದೆ ಅಡಿ ನೋಂದಣಿಯಾದ ಪ್ರತಿ ಖಾಸಗಿ ಆಸ್ಪತ್ರೆಗಳಿಗೆ ಯೂಸರ್ ಐಡಿ, ಪಾಸ್ವರ್ಡ್ ನೀಡಿ ಆನ್ಲೈನ್ ಮೂಲಕ ತಮ್ಮ ಆಸ್ಪತ್ರೆಗಳಿಗೆ ಬರುವ ಐಎಲ್ಐ ಮತ್ತು ಎಸ್ಎಆರ್ಐ ಪ್ರಕರಣಗಳನ್ನು ಅಪ್ಡೇಟ್ ಮಾಡಬೇಕೆಂದು ತಿಳಿಸಲಾಗಿತ್ತು.
https://www.facebook.com/permalink.php?story_fbid=273074034119479&id=105586904201527
ಈಗ ಅಪ್ಡೇಟ್ ಮಾಡಿದ ವರದಿಯು ಸ್ಟೇಟ್ ಪೋರ್ಟಲ್ನಿಂದ ತಳಮಟ್ಟದವರೆಗೆ ಅಂದರೆ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ತಲುಪಿಸಿ ಅವರ ವ್ಯಾಪ್ತಿಯಲ್ಲಿ ಬರುವವರಿಗೆ ಗಂಟಲು ದ್ರವ ಪರೀಕ್ಷೆಗೆ ಸಹಕಾರಿಯಾಗುವುದು ಈ ಯೋಜನೆಯ ಉದ್ದೇಶವಾಗಿದೆ.
ಜಿಲ್ಲಾಧಿಕಾರಿಗಳು ಈ ಬಗ್ಗೆ ಐಎಂಎ, ಖಾಸಗಿ ಆಸ್ಪತ್ರೆಯವರೊಂದಿಗೆ ಸಭೆ ನಡೆಸಿ ಪ್ರತಿದಿನ ಮಾಹಿತಿ ಅಪ್ಡೇಟ್ ಮಾಡುವಂತೆ ತಿಳಿಸಿದ್ದರು. ಜೊತೆಗೆ ಅಪ್ಡೇಟ್ ಮಾಡಿದವರಿಗೆ ನೋಟಿಸನ್ನೂ ಸಹ ನೀಡಲಾಗಿದ್ದರೂ ಕೆಲವರು ಅಪ್ಡೇಟ್ ಮಾಡುತ್ತಿಲ್ಲ. ಆದ ಕಾರಣ ಜಿಲ್ಲಾಧಿಕಾರಿಗಳು ಹೀಗೆ ನಿರ್ಲಕ್ಷ್ಯ ವಹಿಸಿದವರ ಆಸ್ಪತ್ರೆ/ನರ್ಸಿಂಗ್ ಹೋಂಗಳನ್ನು ತಾತ್ಕಾಲಿಕವಾಗಿ ಸೀಜ್ ಮಾಡುವಂತೆ ಜೂ.30 ರಂದು ಆದೇಶಿಸಿದ ಹಿನ್ನೆಲೆಯಲ್ಲಿ ಇಂದು ದಾಳಿ ನಡೆಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಐಎಲ್ಐ ಮತ್ತು ಎಸ್ಎಆರ್ಐ ಪ್ರಕರಣ ಅಪ್ಡೇಟ್ ಮಾಡದ 170 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಕೆಪಿಎಂಇ ಅಡಿಯಲ್ಲಿ ನವೀಕರಿಸದ ಮತ್ತು ಐಎಲ್ಐ ಎಸ್ಎಆರ್ಐ ಪ್ರಕರಣ ವೆಬ್ಪೋರ್ಟಲ್ಲ್ಲಿ ದಾಖಲಿಸದೇ ಇರುವ ಒಟ್ಟು 280 ಆಸ್ಪತ್ರೆ/ನರ್ಸಿಂಗ್ ಹೋಂಗಳಿಗೆ ನೋಟಿಸ್ ನೀಡಲಾಗಿದೆ. ಕೆಲವು ಆಸ್ಪತ್ರೆ/ನರ್ಸಿಂಗ್ ಹೋಂಗಳಿಗೆ ನವೀಕರಿಸುವಲ್ಲಿ ಕೆಲವು ಸಮಸ್ಯೆಗಳಿವೆ. ಇವುಗಳಿಗೆ ಪರಿಹಾರೋಪಾಯಗಳ ಬಗ್ಗೆ ಜು.3 ರಂದು ಡಿಹೆಚ್ಓ ಕಚೇರಿಯಲ್ಲಿ ಖಾಸಗಿ ಆಸ್ಪತ್ರೆಯವರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲರೂ ಹಾಜರಾಗಿ ಇದರ ಸದುಪಯೋಗ ಪಡೆಯಬೇಕು. ಹಾಗೂ ಇನ್ನು 15 ದಿನಗಳ ಒಳಗೆ ನೋಂದಣಿ ನವೀಕರಿಸಿಕೊಂಡು ಸರ್ಕಾರದ ಆದೇಶದಂತೆ ನಡೆಯಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ಬಿಇಹೆಚ್ಓ ಡಾ.ಸುರೇಶ್, ಸಿಬ್ಬಂದಿಗಳು ಹಾಜರಿದ್ದರು.



