ಡಿವಿಜಿಸುದ್ದಿ, ಕಾಂ, ಬೆಂಗಳೂರು:ಅಕ್ರಮ ಹಣ ವರ್ಗವಣೆ ತನಿಖೆಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ ಎನ್ನುವ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ವಶಕ್ಕೆ ಪಡೆಯುತ್ತಿದ್ದಂತೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
ನಿನ್ನೆ ರಾತ್ರಿ ಡಿ.ಕೆ.ಶಿವಕುಮಾರ್ ಬಂಧನವಾಗುತ್ತಿದ್ದಂತೆ ರಾಮನಗರ, ಕನಕಪುರ, ಬಳ್ಳಾರಿ, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ತಡ ರಾತ್ರಿ ವರೆಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿ ಟೈರ್ ಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಡಿಕೆಶಿ ಅವರ ಸ್ವಕ್ಷೇತ್ರ ಕನಕಪುರದಲ್ಲಿ ಪ್ರತಿಭಟನೆಯ ತೀವ್ರತೆ ಹೆಚ್ಚಾಗಿತ್ತು. ಈ ಪ್ರತಿಭಟನೆಗೆ ಎರಡು ಕೆಎಸ್ ಆರ್ ಟಿಸಿ ಬಸ್ ಗಳಿಗೂ ಕೂಡ ಬೆಂಕಿ ಹಚ್ಚಲಾಗಿದೆ.
ಇನ್ನು ಡಿ.ಕೆ.ಶಿವಕುಮಾರ್ ಬಂಧನಕ್ಕೆ ಮಾಜಿ ಸಿಎಂ ಸಿದ್ದರಾಮ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಅನೇಕ ನಾಯಕರು ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಹದ್ಯೋಗಿ ಡಿ.ಕೆ.ಶಿವಕುಮಾರ್ ಅವರ ಬಂಧನ ಅತ್ಯಂತ ಖಂಡನೀಯ ಕೃತ್ಯ. ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿ ಎದುರಿಸಲಾಗದೆ ಅಧಿಕಾರ ದುರುಪಯೋಗದ ಮೂಲಕ ದಮನಿಸುವ ಯತ್ನ ಹೇಡಿತನದ್ದು. ಇಂತಹ ಕಷ್ಟದ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಶಿವಕುಮಾರ್ ಬೆಂಬಲಕ್ಕಿದೆ.@INCKarnataka
— Siddaramaiah (@siddaramaiah) September 3, 2019
ತಮ್ಮ ಹಿತಾಸಕ್ತಿಗಳಿಗೆ ಬಗ್ಗದ ಪ್ರತಿಪಕ್ಷದ ನಾಯಕರನ್ನು ಮಣಿಸಲು ಕೇಂದ್ರ ಸರ್ಕಾರ ವಿವಿಧ ಏಜೆನ್ಸಿಗಳನ್ನು ಅಕ್ರಮವಾಗಿ ಬಳಸುತ್ತಿರುವುದು ದೃಢಪಟ್ಟಿದೆ.ಹಬ್ಬದ ಆಚರಣೆಗೂ ಅವಕಾಶ ನೀಡದೆ 4ದಿನಗಳ ಕಾಲ ನಿರಂತರ ವಿಚಾರಣೆಗೆ ಒಳಪಟ್ಟ @DKShivakumar ರನ್ನು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ನೆಪದ ಮೇಲೆ ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) September 3, 2019
ಇಂದು ದೆಹಲಿಯಲ್ಲಿ ಶ್ರೀ @DKShivakumar ರವರನ್ನು ಭೇಟಿ ಮಾಡಿದ್ದೇನೆ, ಸುಮಾರು 15 ಅಡಿಗಳ ದೂರದಿಂದ ಅವರನ್ನು ಕಂಡೆ, ನನ್ನನು ನೋಡಿ ವಿಶ್ ಮಾಡಿದರು.
ವಶಕ್ಕೆ ಪಡೆದ್ರು ಅಂತ ಅವರೇನು ಧೈರ್ಯ ಕಳೆದುಕೊಂಡಿಲ್ಲ.ಐಟಿ,ಇಡಿಯವರು ಅವರ ಕೆಲಸ ಮಾಡಬೇಕೆ ವಿನಃ ಬೇರೆಯವರ ಕೈಗೊಂಬೆಯಾಗಿ ಮಾಡಿದರೆ ಹೇಗೆ ? ಇದೊಂದು ದುರುದ್ದೇಶಪೂರಿತ ಕೃತ್ಯ. pic.twitter.com/VhxPP20wgg
— Ramalinga Reddy (@RLR_BTM) September 3, 2019
CBI ಮತ್ತು ED ಯನ್ನು ಮುಂದೆ ಇಟ್ಟುಕೊಂಡು ವಿಚಾರಣೆ ನೆಪದಲ್ಲಿ @DKShivakumar ರವರಿಗೆ ಮಾನಸಿಕ ಹಿಂಸೆ ಕೊಡುತ್ತಿರುವದು ರಾಜಕೀಯ ದುರುದ್ದೇಶ. ಗುಜರಾತನ್ ಶಾಸಕರಿಗೆ ರಕ್ಷಣೆ ಕೊಟ್ಟಿದ್ದಕ್ಕೆ @BJP4India ಯವರು ಈ ರೀತಿಯ ದ್ವೇಷ ತೀರಿಸಿಕೊಂಡು ವಿರೋಧ ಪಕ್ಷದವರ ಧ್ವನಿ ಅಡಗಿಸುವ ನೀಚ ರಾಜಕಾರಣ ಮಾಡುತ್ತಿರುವದು ಖಂಡನೀಯ. @INCKarnataka pic.twitter.com/QQcTiX6WPo
— Eshwar Khandre (@eshwar_khandre) September 2, 2019
ದ್ವೇಷದ, ಕುತಂತ್ರದ ರಾಜಕಾರಣ ಮಾಡುತ್ತಿರುವ @narendramodi ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಮುಗಿಸುವ ಹೀನ ಕೃತ್ಯಕ್ಕಿಳಿದಿದೆ.@DKShivakumar ರನ್ನು ಬಂಧಿಸಿರುವುದನ್ನು ಕಟುವಾಗಿ ಖಂಡಿಸುತ್ತೇವೆ.
ಕಾಂಗ್ರೆಸ್ ಪಕ್ಷ, ಕಾರ್ಯಕರ್ತರ
ಸೈದ್ಧಾಂತಿಕ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ.— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 3, 2019
ದಾವಣಗೆರೆಯಲ್ಲಿಯೂ ಕೂಡ ನಿನ್ನೆ ರಾತ್ರಿ ಯುವ ಕಾಂಗ್ರೆಸ್ ಘಟಕದ ವತಿಯಿಂದ ಜಯದೇವ ವೃತ್ತದಲ್ಲಿ ಡಿ. ಬಸವರಾಜು, ಎಲ್. ಎಚ್ ಸಾಗರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಡಿಕೆಶಿ ಬಂಧನ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಇನ್ನು ಇವತ್ತು ಕೂಡ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ. ದಾವಣಗೆರೆಯಲ್ಲಿಯೂ ಕೂಡ ಬೆಳಗ್ಗೆ 11 ಗಂಟೆಗೆ ಜಯದೇವ ಸರ್ಕಲ್ ಬಳಿ ಕೆಪಿಸಿಸಿ ಜಿಲ್ಲಾಧ್ಯಕ್ಷ ಮಂಜಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.



