ಬೆಂಗಳೂರು: ಈ ಬಾರಿ ಮೇ, ಜೂನ್ ತಿಂಗಳಲ್ಲಿ ಮುಂಗಾರು ಮಳೆ (monsoon rain) ನಿರೀಕ್ಷೆ ಮೀರಿ ಸುರಿದಿದೆ. ಇನ್ನೂ ಕೆಲ ಜಿಲ್ಲೆಯಲ್ಲಿ ಮಳೆ ಕೊರತೆ ಸಹ ಉಂಟಾಗಿದೆ. ಇದರ ಮಧ್ಯೆ ಜು.1ರಿಂದ ಸೆ.30ರವರೆಗೆ ಮತ್ತೆ ವಾಡಿಕೆಗಿಂತಲ್ಲೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ನಲ್ಲಿ ವಾಡಿಕೆಯಷ್ಟು ಸುರಿದು ಎಲ್ಲಡೆ ಬಿತ್ತನೆ ಕಾರ್ಯ ನಡೆದಿದೆ. ಆದರೆ, ಜುಲೈನಿಂದ ಮಳೆ ಇನ್ನಷ್ಟು ಅಧಿಕ ಸುರಿಯಲಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿಯೇ ಅಧಿಕ ಮಳೆಯಾಗಿತ್ತು. ಈ ಬಾರಿಯೂ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮಾಹಿತಿ ನೀಡಿದೆ. ಈ ವರ್ಷ 15 ವರ್ಷದ ಬಳಿಕ 12 ದಿನ ಮುಂಚಿತವಾಗಿ ಮುಂಗಾರು ಮಳೆ ಆಗಮಿಸಿತ್ತು.
ಮಳೆ ಉತ್ತಮ ಆಗಿದ್ದರಿಂದ ರೈತರು ಮೆಕ್ಕೆಜೋಳ, ಜೋಳ ಸೇರಿ ಹಲವು ಬೀಜ ಬಿತ್ತಿದ್ದರು. ಮಾನ್ಸೂನ್ ದುರ್ಬಲಗೊಂಡ ಪರಿಣಾಮ ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಾಗಿದೆ.
ಯಾವ ಜಿಲ್ಲೆಯಲ್ಲಿ ಮಳೆ ಕೊರತೆ..?
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು,ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಕರಾವಳಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ದಕ್ಷಿಣ ಕರ್ನಾಟಕದಲ್ಲಿ ವಾಡಿಕೆಯಂತೆ 61 ಮಿಮೀ ಮಳೆಯಾಗಬೇಕಿತ್ತು. ಆದರೆ, 48 ಮಿಮೀ ಮಳೆಯಾಗಿದೆ. ಇನ್ನೂ ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಸುರಿದಿದೆ. ಆದರೂ, ಕೆಲ ಜಿಲ್ಲೆಗಳಲ್ಲಿ ಕೊರತೆಯಾಗಿದೆ.
ಎಲ್ಲಿ ಮಳೆ ಅಧಿಕ..?
ಕರಾವಳಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಭರ್ಜರಿ ಮಳೆಯಾಗಿದೆ.