ಬೆಂಗಳೂರು; ಮೇ ತಿಂಗಳ ಅಂತ್ಯದಲ್ಲಿ ಮುಂಗಾರು ಪೂರ್ವ ಭಾರೀ ಮಳೆಯಿಂದ ರಾಜ್ಯದೆಲ್ಲಡೆ ಅವಾಂತರ ಸೃಷ್ಟಿಸಿತ್ತು. ಆದರೀಗ, ರಾಜ್ಯದಲ್ಲಿ ಮುಂಗಾರು ಮಳೆ (monsoon rain2025) ಪ್ರವೇಶ ಪಡೆದರೂ ಅಬ್ಬರಿಸುತ್ತಿಲ್ಲ. ರಾಜ್ಯದಲ್ಲಿ ಒಣಹವೆ ಬೀಸುತ್ತಿದ್ದು, ಬಿತ್ತನೆ ಮಾಡಿದ ರೈತರು ಮುಗಿಲು ನೋಡುವಂತಾಗಿದೆ. ಜೂನ್ 10ರ ಬಳಿಕ ಮಳೆ ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದಾದ್ಯಂತ ಎರಡ್ಮೂರು ದಿನ ಒಣಹವೆ ಇರಲಿದ್ದು, ಕೆಲವು ಪ್ರದೇಶದಲ್ಲಿ ಮಾತ್ರ ತುಸು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರ್ನಾಟಕದಲ್ಲಿ ಮುಂಗಾರು ಪೂರ್ವ ಜೋರು ಮಳೆ ಬಂದಿದ್ದರೂ, ಮುಂಗಾರು ಮಳೆ ಆರಂಭಿಕ ನೀರಿಕ್ಷೆ ಕ್ಷೀಣಿಸಿದೆ. ಮುಂಗಾರು ಪೂರ್ವ ಮಳೆ ನಂಬಿ ಬಿತ್ತಿದ ರೈತರಲ್ಲಿ ಆತಂಕ ಮೂಡಿಸಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆ ನಿರೀಕ್ಷಿಸಲಾಗಿದೆ.