ದಾವಣಗೆರೆ: ಎಟಿಎಂ ಯಂತ್ರದಿಂದ ಹಣ ದೋಚಲು ಯತ್ನಿಸಿದ ಕಳ್ಳರು, ಯಂತ್ರ ಒಡೆಯಲು ಸಾಧ್ಯವಾಗದಿದ್ದಾಗ ಪೆಟ್ರೋಲ್ ಸುರಿದಿದ್ದಾರೆ. ಇದರಿಂದ ಏಕಾಏಕಿ ಶಾರ್ಟ್ ಸರ್ಕೀಟ್ ಆಗಿ ಬೆಂಕಿ ಕಾಣಿಸಿಕೊಂಡಿದ್ದು, ಕಳ್ಳರು ಅಲ್ಲಿಂದ ಪರಾರಿಯಾದ ಘಟನೆ ನಡೆದಿದೆ.
ಶಾರ್ಟ್ ಸರ್ಕೀಟ್ ನಿಂದ ಬೆಚ್ಚಿ ಬಿದ್ದ ಕಳ್ಳರು
ಈ ಘಟನೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದ ಕೆನರಾಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಹಣ ಕಳ್ಳತನಕ್ಕೆ ಯತ್ನಿಸಿದ್ದು, ಪೆಟ್ರೋಲ್ ಸುರಿದ ತಕ್ಷಣ ಶಾರ್ಟ್ ಸರ್ಕೀಟ್ನಿಂದ ಬೆಂಕಿ ಹೊತ್ತಿಕೊಂಡಿದ್ದರಿಂದ ಬೆಚ್ಚಿಬಿದ್ದ ಖದೀಮರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಕಬ್ಬಿಣ ರಾಡ್ ನಿಂದ ಓಪನ್ ಆಗದಿದ್ದಾಗ ಪೆಟ್ರೋಲ್ ಸುರಿದ್ರು..
ಬಿಳಿಚೋಡು ಗ್ರಾಮದ ಭರಮಸಾಗರದ ರಸ್ತೆಯಲ್ಲಿರುವ ಎಟಿಎಂ ಕೇಂದ್ರದಲ್ಲಿ ಮೊದಲು ಕಬ್ಬಿಣದ ರಾಡ್ ಬಳಸಿ ಯಂತ್ರ ಒಡೆಯಲು ಪ್ರಯತ್ನಿಸಿದ್ದಾರೆ. ಯಂತ್ರ ಒಡೆಯಲು ಸಾಧ್ಯವಾಗದಿದ್ದಾಗ ಎಟಿಎಂ ಯಂತ್ರಕ್ಕೆ ಪೆಟ್ರೋಲ್ ಸುರಿದು ಓಪನ್ ಮಾಡಲು ಯತ್ನಿಸಿದಾಗ ಶಾರ್ಟ್ ಸರ್ಕೀಟ್ ಉಂಟಾಗಿ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಕಾಣಿಸಿಕೊಂಡಿದೆ. ಆಗ ಅಲ್ಲಿಂದ ಓಡಿ ಹೋಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಬಿಳಿಚೋಡು ಪೊಲೀಸರು ಬೆಂಕಿ ನಂದಿಸಿದ್ದಾರೆ.
ಬಿಳಿಚೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ವಾನ ದಳ, ಬೆರಳಚ್ಚು ತಜ್ಞರು ಪರಿಶೀಲಿಸಿದ್ದಾರೆ. ಎಟಿಎಂ ಕೇಂದ್ರಕ್ಕೆ ಸೂಕ್ತ ಸಿಸಿಟಿವಿ, ಭದ್ರತಾ ಲೋಪ ಇದ್ದು, ಕಳ್ಳರಿಗೆ ವರದಾನವಾಗಿದೆ.