ಶಿವಮೊಗ್ಗ: ದಾವಣಗೆರೆ ಜಿಲ್ಲಾ ರೈತರ ಜೀವನಾಡಿಯಾದ ಭದ್ರಾ ಜಲಾಶಯ (bhadra dam) ಬಲದಂಡೆ ನಾಲೆಯನ್ನು ಒಡೆದು ಕುಡಿಯುವ ನೀರಿನ ಯೋಜನೆಗಾಗಿ ನೀರು ಕೊಂಡೊಯ್ಯವುದನ್ನು ದಾವಣಗೆರೆ ಜಿಲ್ಲಾ ರೈತರು, ಜನಪ್ರತಿನಿಧಿಗಳು ತೀವ್ರ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ನಿರತ ತಡೆ, ವಶಕ್ಕೆ
ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಸೋಮವಾರ ಭದ್ರಾ ಜಲಾಶಯಕ್ಕೆ ಮುತ್ತಿಗೆ ಹಾಕಲು ಮಾಜಿ ಸಚಿವ ರೇಣುಕಾಚಾರ್ಯ, ನೇತೃತ್ವದಲ್ಲಿ ಸೇರಿದ ಸಾವಿರಾರು ರೈತರನ್ನು ಭದ್ರಾ ಯೋಜನಾ ಪ್ರದೇಶದ (ಬಿಆರ್ ಪಿ ಡ್ಯಾಂ) ಸಿಂಗನಮನೆಯ ಸೇತುವೆ ಬಳಿ ಪ್ರತಿಭಟನ ನಿರತರನ್ನು ತಡೆದು ಪೊಲೀಸರು ವಶಕ್ಕೆ ಪಡೆದರು.
ನಾಲೆ ಒಡೆದ್ರೆ ಕೊನೆ ಭಾಗಕ್ಕೆ ತಲುಪದ ನೀರು
ದಾವಣಗೆರೆ ಜಿಲ್ಲೆಗೆ ಸಂಪೂರ್ಣ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಬಲದಂಡೆಯಿಂದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ, ಕಡೂರು ತಾಲ್ಲೂಕುಗಳ 1200 ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯಲು ನೀರು ಕೊಡಲು ನಾಲೆಯನ್ನು ಒಡೆದು ನೀರು ಒಯ್ಯಲು ಕಾಮಗಾರಿ ಭರದಿಂದ ಸಾಗಿದೆ. ಇದರಿಂದ ಕೊನೆ ಭಾಗದ ರೈತರಿಗೆ ನಾಲೆಯಲ್ಲಿ ತಲುಪಲು ಸಾಧ್ಯವಾಗುವುದಿಲ್ಲ ಆಕ್ರೋಶ ವ್ಯಕ್ತಪಡಿಸಿದರು. ನೀರು ಕೊಡಲು ನಮ್ಮ ಅಭ್ಯಂತರವಿಲ್ಲ. ಕಾಲುವೆ ಒಡೆಯುವ ಬದಲು ಜಲಾಶಯದಿಂದ ನೇರವಾಗಿ ನೀರು ಕೊಂಡೊಯ್ಯಲು ಆಗ್ರಹಿಸಿದರು.
ದಾವಣಗೆರೆ ಬಂದ್ ಗೆ ಕರೆ
ಭದ್ರಾ ಜಲಾಶಯದ ಬಲದಂಡೆ ನಾಲೆ ಒಡೆದು ನಡೆಸುತ್ತಿರುವ ಕಾಮಗಾರಿಯನ್ನು ಕೂಡಲೆ ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಜೂನ್ 28ರಂದು ದಾವಣಗೆರೆ ನಗರ ಬಂದ್ (Bandh) ಆಚರಿಸಲಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ಬಲದಂಡೆ ನಾಲೆಯಲ್ಲಿ ಕಾಮಗಾರಿ ನಡೆಸುತ್ತಿರುವುರಿಂದ ದಾವಣಗೆರೆ ಭಾಗದ ರೈತರಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಇವತ್ತು ಭದ್ರಾ ಜಲಾಶಯದ ಮುಂಭಾಗ ಹೋರಾಟ ನಡೆಸಿದೆವು. ಬುಧವಾರ ಬೆಳಗ್ಗೆ ದಾವಣಗೆರೆಯ ಬಾಡಾ ಕ್ರಾಸ್ನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು. ಶನಿವಾರ ದಾವಣಗೆರೆ ನಗರ ಬಂದ್ ಆಚರಿಸಲಾಗುತ್ತದೆ. ವರ್ತಕರು ಇದಕ್ಕೆ ಸಹಕಾರ ನೀಡಬೇಕು ಎಂದರು.
ದಾವಣಗೆರೆ ಜಿಲ್ಲೆ ಬಿಜೆಪಿ ಅಧ್ಯಕ್ಷ ರಾಜಶೇಖರ್, ಮಾಯಕೊಂಡ ಮಾಜಿ ಶಾಸಕ ಬಸವರಾಜ ನಾಯ್ಕ, ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ, ಮಾಡಾಳು ಮಲ್ಲಿಕಾರ್ಜುನ, ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಮೇಯರ್ ಅಜಯ್, ಕೊಳೇನಹಳ್ಳಿ ಸತೀಶ್ ಮತ್ತಿತರರು ಇದ್ದರು.